Thursday, March 7, 2013

ನಾಮದ ಫಲ!














(ಚಿತ್ರ:ವೆಬ್ ಕೃಪೆ.)


ಹೆಂಡ್ತಿ
*****

ಹೆಂಡ
ಕುಡಿಯಲು
ದುಡಿದು
ತಂದು
ಕೊಡುವವಳು!

ಧರ್ಮ ಪತ್ನಿ
********
ದುಡಿದು
ದ(ಧ)ರ್ಮದ
ಅನ್ನ
ಹಾಕುವವಳು!

ಅರ್ಧಾಂಗಿ
********
ದುಡಿದು ತಂದು
ಹೆಂಡ ಕುಡಿಸಿ
ದ(ಧ)ರ್ಮದ
ಅನ್ನದೊಟ್ಟಿಗೆ
ತನ್ನರ್ಧಾಂಗವನ್ನು
ಹಂಚಿಕೊಳ್ಳುವವಳು!

ಮಡದಿ
******
ಗಂಡ
ದಯಾಪಾಲಿಸಿದ
ಮಕ್ಕಳ ಹಡೆದು
ದುಡಿದು
ಸಾಕುವವಳು!

ಸತಿ
*****
ಸವತಿಯೊಟ್ಟಿಗೆ
ಸವೆದು
ಗಂಡನ
ಪೋಷಣೆ ಮಾಡಿ
ಕೂಡಿ
ಬಾಳುವವಳು!

ಭಾರ್ಯೆ
******
ಗಂಡನ
ಕಾಟ,
ಸವತಿಯ
ಕೂಟದ
ಭಾರ
ತಾಳಲಾರದೆ
ಅರಕ್ಷಕರಲ್ಲಿ
ದೂರು ನೀಡಿ
ನ್ಯಾಯ
ಕೆಳುವವಳು!


           ಸ್ಪೂರ್ತಿ
           ಬಂಟಕಲ್ಲು.
           08.03.2013

Friday, March 1, 2013

ಕರ್ನಾಟಕದಲ್ಲಿ ಕನ್ನಡ ಬೆಳಗಬೇಕಾದರೆ....






ಕರ್ನಾಟಕದಲ್ಲಿ '' ಕನ್ನಡ ಮಾತೃ ಭಾಷಾ ದಿನ'' ವನ್ನು ವರ್ಷದ ಒಂದು ದಿನ ಆಚರಿಸುವುದು ಸೂಕ್ತವೋ ಅಲ್ಲವೋ ಎಂಬುದು ಕನ್ನಡಿಗರು ಯೋಚಿಸಬೇಕಾಗಿದೆ.  ಕನ್ನಡವನ್ನೇ ಮಾತೃ ಭಾಷೆಯನ್ನಾಗಿ ಆಡುವವರು ಆಚರಿಸಬಹುದು. ಆದರೆ ಇತರ ರಾಜ್ಯಗಳಂತೆ ಕರ್ನಾಟಕದಲ್ಲಿ ಕನ್ನಡ ಒಂದೇ ಮಾತೃಭಾಷೆಯಲ್ಲ! ಇಲ್ಲಿ ಕೊಂಕಣಿ, ತುಳು, ಆದಿವಾಸಿ, ಬ್ಯಾರಿ, ಉರ್ದು,.... ಹೀಗೆ ಜನರ ಮಾತೃ ಭಾಷೆಯ ಪಟ್ಟಿಯೇ ದೊಡ್ಡದಿದೆ!

ಕರ್ನಾಟಕದಲ್ಲಿ ಇರುವವರೆಲ್ಲ ಕನ್ನಡ ಮಾತೃ ಭಾಷೆಯವರಲ್ಲ ಆದರೆ ಎಲ್ಲರೂ ಕನ್ನಡಿಗರು ಖಂಡಿತ! ಇಲ್ಲಿ ಕನ್ನಡ ಮಾತೃ ಭಾಷೆಯವರೋಟ್ಟಿಗೆ ಇತರ ದ್ರಾವೀಡ ಹಾಗೂ ಸಾರಸ್ವತ ಭಾಷೆಯನ್ನೂ ಆಡುವವರು ಇದ್ದಾರೆ '' ಕನ್ನಡ ಮಾತೃ ಭಾಷಾ ದಿನ'' ಕೇವಲ ಅಕಾಡಮಿಯ ದುಡ್ಡನ್ನು ಬಳಸಿ ವೇದಿಕೆಯಲ್ಲಿಯವರೆಗೆ ಮಾತ್ರ ಸೀಮಿತ ಗೊಳಿಸದೆ, ಕನ್ನಡದ ಸವಿಯನ್ನು ಇತರ ಮಾತೃ ಭಾಷೆಯವರೊಟ್ಟಿಗೆ ಹಂಚಿ ಸವಿಯುವ ಕಾರ್ಯಕ್ರಮಗಳು ನಡೆಯಬೇಕಾಗಿವೆ. ಪ್ರಸ್ತುತ ಕನ್ನಡ ಕೇವಲ ವೇದಿಕೆಗಳ ಮೇಲೆ ಆಚರಿಸಲ್ಪಡುತ್ತಿರುವ ಹಬ್ಬ ಯಾ ಕಾರ್ಯಕ್ರಮ ವಾಗುತ್ತಿರುವುದುವುದು ಒಂದು ರೀತಿಯ ವಿಪರ್ಯಾಸವೇ ಸರಿ.

ಕನ್ನಡವನ್ನು ಕರ್ನಾಟಕದ ಮನೆ-ಮನಗಳಲ್ಲಿ ಬಿತ್ತಿ ಬೆಳೆಸಬೇಕಾದರೆ ಕನ್ನಡದ ಹಿಂದೆ ಇರುವ ಬಣ್ಣದ ಧ್ವಜ ಯಾ ದೈವೀ ಕರಣದ ಪರದೆಯನ್ನು ಬದಿಗೆ ಸರಿಸಿ, ಭಾಷೆಗೊಂದು ಜಾತಿ, ಧರ್ಮ, ಪಂಥದ ವ್ಯಾಖ್ಯೆ ಕೊಡದೆ '' ಕನ್ನಡ, ಸರ್ವತ್ರ ಕನ್ನಡ, ಕರ್ನಾಟಕದ ಜನರ ಕನ್ನಡ'' ಎಂಬುದಾಗಿ ಸಾರ್ವತ್ರೀಕರಣ ಗೊಳಿಸುವ ಕಾರ್ಯವಾಗಬೇಕಾಗಿದೆ. ಇದಕ್ಕಾಗಿ ಕನ್ನಡ ಪರ ಸಂಘಟನೆಗಳು ಮತ್ತು ಅಕಾಡಮಿ ಸೇರಿ ಕನ್ನಡ ಯಾರಿಗೂ ಅಸ್ಪೃಶ ಭಾಷೆಯಾಗದಂತೆ ನೋಡಿ ಕೊಂಡು ಈಗ ಇರುವ ನ್ಯುನತೆಗಳನ್ನು ಸರಿಪಡಿಸಿ ಎಲ್ಲಾ ಧರ್ಮೀಯರನ್ನು ಆಕರ್ಷಿಸುವಂತೆ ಮಾಡುವ ಕಾರ್ಯವಾಗಬೇಕಾಗಿದೆ.

ಕನ್ನಡವೇ ರಾಮ,
ಕನ್ನಡವೇ ಜೀಸಸ್,
ಕನ್ನಡದಲಿ ಅಲ್ಲಾನ
ಕಾಣಿರೋ!
ಕನ್ನಡವ ಬಿತ್ತಿ
ದೇವಸ್ಥಾನದ,
ಕಲಶದೊಳು!
ಕನ್ನಡವ ಕೆತ್ತಿ
ಶಿಲುಬೆಯ,
ಶಿಖರದೊಳು!
ಕನ್ನಡವ ಕಾಣಿ
ಮಸೀದಿಯ,
ಗೊಮ್ಮಟದೊಳು.
ಕನ್ನಡದ ಪರಿಮಳ
ಪಸರಿಸಲಿ
ಜೈನ ಬಸದಿಯೋಳು!
ಕನ್ನಡಕಂಡರೆ
ಅರಳಲಿ ಕಣ್ಗಳು
ಕನ್ನಡ ಉಲಿಯಲಿ
ಮುದ್ದು ಕಂದಮ್ಮಗಳ
ತುಟಿಯಲಿ,
ತೊದಲು ನುಡಿಯಲಿ!


ಕನ್ನಡವನ್ನು ಯಾವುದೇ ಧಾರ್ಮಿಕ ಸಂಘಟನೆಗಳಾಳದೆ, ಕನ್ನಡ ನಮ್ಮ ನೆಲ - ಜಲದ ಭಾಷೆ, ಕನ್ನಡ ಕರ್ನಾಟಕದವರೆಲ್ಲರ ಆಸ್ತಿ ಎಂಬುದಾಗಿ ಕನ್ನಡವಾಸಿಗರ ಮನದಲ್ಲಿ ಹಾಗೂ ಎಲ್ಲಾ ಮಾತೃ ಭಾಷೆ ಆಡುವವರ ಮನದಲ್ಲಿ ಮೂಡಿಸುವ ಕಾರ್ಯ ಎಲ್ಲಾ ಧರ್ಮದವರು ಕೂಡಿ ಮಾಡಬೇಕಾಗಿದೆ. ಹೀಗೆ ಮಾಡುವುದರಿಂದ ಕನ್ನಡ ಖಂಡಿತ ಬೆಳೆಯುವುದರಲ್ಲಿ ಸಂದೇಹವಿಲ್ಲ.

ಸ್ಪೂರ್ತಿ,
ಬಂಟಕಲ್ಲು.
 

ನಾನೂ ಅಷ್ಟಮಂಗಲವೂ

 

ಅಷ್ಟಮಂಗಲ ಎಂದರೆ ಯಾರಿಗೊತ್ತಿಲ್ಲ? ಇವತ್ತು  ರಸ್ತೆಯ ಬದಿಯಲಲ್ಲಿ ಬೇಕಾದರೂ  ಅಷ್ಟಮಂಗಲ ಹಾಕುವ ಮತ್ತು ಅದಕ್ಕೆ ಅಣಿಮಾಡುವ ಜನರಿದ್ದಾರೆ. ಅಷ್ಟಮಂಗಲ ಎಂಬುದು ಈಗ ಫ್ಯಾಶನ್ ಆಗಿ ಬಿಟ್ಟಿದೆ. ಎಲ್ಲಾ ಕಡೆ ಎಲ್ಲದಕ್ಕೂ 'ಅಷ್ಟಮಂಗಲ'! ಇದಕ್ಕೆಂದೇ ಕೆಲವು ಏಜಂಟರು ಇದ್ದಾರೆ. ಕೆಲವರು ಶಾಸ್ತ್ರೀಯ ರೀತಿಯಲ್ಲಿ ಮಾಡಿದರೆ ಇನ್ನು ಕೆಲವರು ಕಂಪ್ಯೂಟರ್ ನೋಡಿ ಅಷ್ಟಮಂಗಲದ ಮೋಡಿ ಬಿಡಿಸುವವರಿದ್ದಾರೆ.
 
ಕಳೆದ ಸಲ ನಾನೊಂದು ಅಷ್ಟಮಂಗಲದಲ್ಲಿ ಭಾಗವಹಿಸಿದ್ದೆ. ಇದು ತೀರಾ ಮೋಡರ್ನ್ ಅಷ್ಟಮಂಗಲ! ಮನೆ ಮಂದಿಗೆಲ್ಲಾ ಕೂರಿಸಿ, ಎದುರಿನಲ್ಲಿ ದೀಪ ಹೊತ್ತಿಸಿ, ತದನಂತರ ಕಣ್ಣು ಕುಕ್ಕುವ ಬಣ್ಣದ ಹುಡಿಯಿಂದ ಮಂಡಲ ಬರೆದು, ಮಂಗಲ ದ್ರವ್ಯ, ಹೂ ಹಣ್ಣು, ಕಾಯಿ ಇತ್ಯಾದಿ ಇತ್ಯಾದಿಗಳಿಂದ ಶೃಂಗರಿಸಿಟ್ಟು, ಬದಿಯಲ್ಲಿ ಕಂಪ್ಯೂಟರ್ ತೆರೆದಿಟ್ಟು ಅಗರಬತ್ತಿಯ ಘಮ ಘಮ ಪರಿಮಳದೊಂದಿಗೆ ಸಾಗಿತ್ತು ತಯಾರಿ!
 
ಅಷ್ಟು ಹೊತ್ತಿಗೆ ನನ್ನ ಪ್ರವೇಶ... ಸುತ್ತಲೂ ನೋಡಿದೆ. ಎನೋ ಒಂದು ರೀತಿಯ ಉಲ್ಲಾಸ! ದೇವಸ್ಥಾನಕ್ಕೆ ಹೊಕ್ಕ ಅನುಭವ! ಅಧುನಿಕ ಶಾಸ್ತ್ರಿಗಳು ಹಾಗೂ ಮನೆ ಮಂದಿ ಸ್ವಾಗತಿಸಿ, ನಿಮ್ಮನ್ನೇ ಕಾಯುತ್ತಿದ್ದೆವು ಹೊತ್ತು ಮೀರುತ್ತಿದೆ ಮತ್ತೆ ಗುಳಿಕ ಕಾಲ ಆರಂಭವಾದರೆ ಅಶುಭ! ಎನ್ನುತ್ತಲೇ ಶಾಸ್ತ್ರಿಗಳು ಸಂಸಾರದವರಿಂದ ಸಂಕಲ್ಪ ಮಾಡಿಸಿ,  ಏಕ ಕಾಲದಲ್ಲಿ ಒಂದು ಕೈಯಿಂದ ಒಂದಷ್ಟು ಕವಡೆ ಎತ್ತಿ ಇನ್ನೊಂದು ಕೈಯಿಂದ ಕಂಪ್ಯೂಟರ್ ಗುಂಡಿ ಒತ್ತಿ ಲಗ್ನ ನಿರ್ಧರಿಸಿ ಬಿಟ್ಟಿದ್ದರು! ಅದು ಕುಂಭ ಲಗ್ನವಾಗಿತ್ತು.
 
ಕುಂಭ ಎಂದರೆ ಮತ್ತೆ ಹೇಳಬೇಕೆ? ವೈಶಾಖದಲ್ಲಿ ಮುನ್ಸಿಪಾಲಿಟಿ ನೀರಿನ ನಲ್ಲಿಯಿಂದ ಹರಿದು ಬರುವ ನೀರಿನಂತೆ ನನ್ನ ಗಿಂಬಳವಿಲ್ಲದ ಸಂಬಳ ಈ ಕುಂಭದಲ್ಲಿ ಜೀವನ ಪರ್ಯಂತ ತುಂಬಿದರೂ ಮುಂದಿನ ಜನುಮಕ್ಕೂಅದು ತುಂಬುತ್ತದೆ ಎಂಬ ಭರವಸೆವಿಲ್ಲದ ಬರೇ ನರ ಪ್ರಾಣಿ ನಾನು. ಕಾಪಾಡೆಯ ಭಗವಂತ ಎಂದು ಮನಸಿನಲ್ಲಿಯೇ ದೇವರಲ್ಲಿ ನನ್ನೊಡಲ ಅಳಲನ್ನು ನಿವೆದಿಸಿಕೊಂಡೆ.
 
ಅಷ್ಟರಲ್ಲಿ, ಧರಣಿ ಮಂಡಲ ಮಧ್ಯದೊಳಗಿರುವ ಅಷ್ಟಮಂಗಲದ  ಮಂಡಲದೊಳಗೆ ಕಂಪ್ಯೂಟರ್ ಕಮಂಡಲದಿಂದ ಹೊರಬಂದ ದ್ವಾದಶ ರಾಶಿಗಳು ಒಂದೊಂದು ಮನೆಯಲ್ಲಿ ಸಾಲಾಗಿ ಕುಳಿತು ಈ ಮನೆಗಳ ಹಕ್ಕು ಸ್ವಾಮ್ಯ ಯಾರ ಹಂಗೂ ಇಲ್ಲದೆ ಪಡೆದು ಕೊಂಡವು. ಆದರೆ ಸೌರಮಂಡಲ ಮಧ್ಯದೊಳಗಿನ ನವಗ್ರಹಗಳು ಬಿಡಬೇಕಲ್ಲ! ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಎಲ್ಲವೂ ಕಂಪ್ಯೂಟರ್ ನಿಂದ ದಂಡೆತ್ತಿ ಬಂದು ತಮಗೆ ಪ್ರಿಯವಾದ ಮನೆಗಳಲ್ಲಿ ಅಕ್ರಮವಾಗಿ ಕಂಪ್ಯೂಟರ್ ನಿಂದ ಹೊರಬಂದು ಕುಳಿತ ಮೇಷ, ವೃಷಭ,ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಮುಂಭ, ಮೀನ ಗಳೇ ಮೊದಲಾದ ದ್ವಾದಶ ರಾಶಿಗಳಮೇಲೆ ಜಗಳಕ್ಕೆ ನಿಂತವು!
 
ಇವುಗಳಲ್ಲಿ  ಸಾದು ಗ್ರಹಗಳು ಸುಮ್ಮನೆ ಜಾಗ ಸಿಕ್ಕಿದ್ದಲ್ಲಿ ಕುಂತರೆ.... ಕುತಂತ್ರಿಗಳು ಬಿಡಬೇಕಲ್ಲ..! ಅವು ಅಲ್ಲಿ ಜಾಗ ಸಿಕ್ಕಿಲ್ಲ ಎಂದು ನನಗೆ ನನ್ನ ಲಗ್ನದಲ್ಲಿ ಮಾವನಿಂದ ದೊರಕಿರುವ ಮನೆಗೆ ಮುತ್ತಿಗೆ ಹಾಕಲು ಆರಂಭಿಸಿದವು! ಈಗ ನನಗೆ ಜ್ಞಾನೋದಯವಾಯಿತು! ಮನೆ ಮುತ್ತಿದ ಗ್ರಹಗಳು ಮನೆಯೊಡತಿಯ ಮೈ ಮೇಲಿನ ಬೆಳ್ಳಿಯ ಸರಗಳನ್ನು ಬಿಟ್ಟು, ಉಳಿದ ಒಂದು ಗ್ರಾಂ ಚಿನ್ನ ಲೇಪನದ ದ ಸರವನ್ನೂ ಬಿಡದೆ ಹೊರಡಲಾರವು ಎಂದು!  ಅವುಗಳು ನನ್ನ ಚಿಕ್ಕ ಸಂಸಾರವನ್ನು ಕಬಳಿಸುವ ಮುನ್ನ ನಾನು ನನ್ನ ಚಿಕ್ಕ ಟಾಟಾ ನಾನೋದೊಂದಿಗೆ ಅಷ್ಟಮಂಗಲದ ಮನೆಯಿಂದ ಜಾಗ ಖಾಲಿ ಮಾಡಿದೆ!
 
ಇದಕ್ಕೆ ಏನಂತಾರೆ ನಮ್ಮ ಓದುಗರು

Thursday, January 31, 2013

ಪ್ರೇಮ ಭಿಕ್ಷೆ!










ಗೆಳತಿ,

ತಂದಿರುವೆ
ಹೂ ಗಿಡವನು
ನಿನ್ನ
ಪ್ರೀತಿಯೊಲುಮೆಗಾಗಿ.
ನೆಟ್ಟು
ನಿನ್ನ ಕೈಯಂಗಳದಿ,
ಕಾಯುವೆನು,
ಮೊಗ್ಗು ಬಿರಿದು
ಹಿಗ್ಗಿ,
ಹೂವು ಅರಳಿ,
ಸೌರಭವ
ತಂಗಾಳಿ ಜತೆಗೂಡಿ,
ಬಂದೆನ್ನ
ಹೃದಯದಲೊಂದ
ಪ್ರೀತಿಯ
ಬೀಜ ಬಿತ್ತಿ,
ಪ್ರೇಮದ ನೀರೆರೆದು,
ಎಚ್ಚರಿಸು
ಬಾರೆಂದು! 

                    ಸ್ಪೂರ್ತಿ,
                    ಬಂಟಕಲ್ಲು.


 

Friday, January 18, 2013

ರಸಿಕತೆ.





ಮಾನವನ ದೇಹದ,
ಅಂಗಾಂಗಗಳ
ಜೋಡಣೆಯ
ಕೀಲು ಗಳಿಗೆ,
ಕೀಲೆಣ್ಣೆ ಸುರಿದು,
ಕಾರ್ಯ ಕ್ಷಮತೆ
ನೋಡುವ
ಸಹಜ
ಪ್ರಕ್ರಿಯೆ!

                ಸ್ಪೂರ್ತಿ
                ಬಂಟಕಲ್ಲು

Saturday, January 12, 2013

ಸ್ನೇಹದ ಬೆಲೆ!















ಬಾಲ್ಯದ ಸ್ನೇಹಿತರು
ಈಗ ಬರೀ-
ಸ್ನೇಹಿತರಾಗಿ
ಉಳಿದಿಲ್ಲ;
ಅವರೆಲ್ಲ
ಈಗ,
ಜೀವ ವಿಮಾ
ಏಜಂಟರು.
ಊರಿಗೆ
ಹೋದಾಗಲೆಲ್ಲ,
ನಿಯಮಿತವಾಗಿ
"ಪಾಲಿಸಿ"
ಎಂದಂಟುವರು!

                       ಸ್ಪೂರ್ತಿ
                       ಬಂಟಕಲ್ಲು


 

ಅರ್ಹತೆ.












ಬಂಡೆಕಲ್ಲನೊಡೆದು,
ಒಡಕು-ಬಿರುಕಿಲ್ಲದ
ತುಂಡನಾಯ್ದು,
ಅಂಗುಲಾಂಗುಲಳೆದು,
ಅಜ-ಗಜ-ಧ್ವಜಗಳೆಂಬ
ಆಯವನು ಕೊಟ್ಟು,
ಆಯ-ವ್ಯಯ
ಪರಿಮಿತಿಗಳೊಳಗೆ,
ಶಿಲ್ಪಿ,
ಕೆತ್ತಿ ಕೆರೆಯುವಾಗಲೆಲ್ಲ;
ಕಲ್ಲಿಗೆ
ನೋಯುವುದಾದರೆ,
ಸುಂದರ
ಮೂರ್ತಿಯಾಗಿ
ಪೂಜಾರ್ಹತೆ
ಪಡೆಯುವುದಾದರೂ
ಹೇಗೆ?

                                   ಸ್ಪೂರ್ತಿ
                                   ಬಂಟಕಲ್ಲು