Friday, September 27, 2013

ತರ್ಜುಮೆ


ಸಂಬಂಧಗಳು - ಲಘು ಬರಹ.


ಸಂಬಂಧಗಳು – ಲಘು ಬರಹ

 
ಊರು ಬಿಟ್ಟು ಸುಮಾರು ಹದಿನೈದು ವರ್ಷಗಳ ನಂತರ ಒಮ್ಮೆ ಊರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ಮನಸ್ಸಾಯಿತು. ಅಂದು ಸೋಮವಾರ. ಸೋಮವಾರ ಊರಿನ ಹೆಚ್ಚಿನ ಜನರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವುದು ರೂಢಿ. ನಾನೂ ಸಂಸಾರ ಸಮೇತನಾಗಿ ದೇವಸ್ಥಾನಕ್ಕೆ ಹೋಗಿದ್ದೆ. ಊರು ಬಿಟ್ಟು ಸುಮಾರು ವರ್ಷಗಳಾಗಿದ್ದರಿಂದ, ಊರಿನ ಹೆಚ್ಚಿನ ಮಿತ್ರರು, ಪರಿಚಯಸ್ಥರು, ಹಿತೈಷಿಗಳು ದೇವಸ್ಥಾನದಲ್ಲಿ ಸಿಗಬಹುದು, ಸಿಕ್ಕರೆ ಬಾಯಿ ತುಂಬಾ ಮಾತನಾಡಿ ಖುಷಿ ಪಡಬೇಕು ಎಂಬ ಆಸೆಯನ್ನು ಹೊತ್ತಿದ್ದೆ.

ಉಡುಪಿಯಿಂದ ಸುಮಾರು ಹದಿನಾಲ್ಕು ಹದಿನೈದು ಕಿಲೋಮೀಟರು ದೂರದಲ್ಲಿದೆ ನನ್ನ ಹುಟ್ಟೂರು. ಉಡುಪಿ, ಉದ್ಯಾವರ, ಕಟಪಾಡಿ, ಸುಭಾಸ್ ನಗರ, ಶಂಕರಪುರ ರಸ್ತೆ ಯಲ್ಲಿ ಚಲಿಸಿದರೆ ಮುಂದೆ ಸಿಗುವುದು ಬಂಟಕಲ್ಲು. ಇಲ್ಲಿಂದ ನನ್ನೂರ ಹೇರೂರು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು ಒಂದು ಕಿಲೋಮೀಟರು ದೂರ. ಇದನ್ನು ಸುಮಾರು ಅರ್ಥ ತಾಸಿನಲ್ಲಿ ಕ್ರಮಿಸಿ ದೇವಸ್ಥಾನದ ಬಳಿ ಗಾಡಿ ನಿಲ್ಲಿಸಿ ಒಮ್ಮೆ ಸುತ್ತಲೂ ನೋಡಿದೆ. ಎಲ್ಲಾ ಬದಲಾವಣೆ. ಸುತ್ತ ಮುತ್ತ ದೊಡ್ಡ ದೊಡ್ಡ ಮನೆಗಳು ಎದ್ದು ನಿಂತಿವೆ. ಮಂಗಗಳೇ ಇಲ್ಲದ ಈ ಪರಿಸರದಲ್ಲಿ ಈಗ ಮಂಗಗಳು ತುಂಬಿ ಹೋಗಿವೆ. ದೇವಸ್ಥಾನದಲ್ಲಿ ಹೊಸ ಚಂದ್ರಶಾಲೆಯ ನಿರ್ಮಾಣವಾಗಿದೆ.ದೇವಸ್ಥಾನದ ಹಿಂದೆ ಅರ್ಚಕರಿಗೊಂದು ಮನೆಯ ನಿರ್ಮಾಣವೂ ಆಗಿದೆ. ಈ ಎಲ್ಲಾ ಅಭಿವೃದ್ಧಿ ಕಂಡು ಮನಸ್ಸಿಗೆ ತೃಪ್ತಿಯಾಯಿತು.

 ಸುಮಾರು ವರ್ಷಗಳ ನಂತರ ಊರಿನತ್ತ ಹೋಗುತ್ತಿದ್ದುದರಿಂದ, ಮನದೊಳಗೆ ಎನೋ ಉಲ್ಲಾಸ, ಉತ್ಸಾಹ ತುಂಬಿತ್ತು. ದೇವಸ್ಥಾನದಲ್ಲಿ ಯಾರು ಸಿಗಬಹುದು? ಮೇಲ್ಮನೆಯ ಕಾಮತರೇ? ಸೀನ ದೇವಾದಡಿಗರೇ? ರಾಘವ ಆಚಾರ್ಯರೇ? ಅಥವಾ ದೇವದಾಸರೇ?. ಬಂಟಕಲ್ಲಿನ ರಮೇಶ ಆಚಾರ್ಯರು ಬೆಂಗಳೂರಿಗೆ ಹೋಗಿ ಹಲವಾರು ವರ್ಷಗಳಾಗಿವೆ. ಒಂದುವೇಳೆ ಅವರು ಊರಿಗೆ ಬಂದಿದ್ದರೆ ಅವರೂ ಸಿಗಬಹುದಲ್ಲವೇ?. ಶಾಂತಕ್ಕ, ಕಮಲಕ್ಕ, ಕೂಸಕ್ಕ ಗುಲಾಬಿಯವರೂ ಬಂದಿರಬಹುದೇ?. ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ, ಆಗಿನ್ನೂ ಚಿಕ್ಕ ಚಿಕ್ಕ ಪುಟಾಣಿಳಾಗಿದ್ದ ಅರುಣ, ದಿನೇಶ, ಉಮೇಶ, ಗಣೇಶ, ಕವಿತಾ, ಸುನೀತಾ, ಉಷ, ದಿವ್ಯಾರವರು ಈಗ ಎಷ್ಟು ದೊಡ್ದವರಾಗಿರಬಹುದು? ಅವರಿಗೆ ನನ್ನ ಪರಿಚಯವಾಗಬಹುದೇ? ನನ್ನ ಹೆಸರು ನೆನಪಿರಬಹುದೇ? ಹೀಗೆ ಹಲವಾರು ಕಾತರದ ಪ್ರಶ್ನೆಗಳನ್ನ ಹೊತ್ತು ದೇವಸ್ಥಾನದೊಳಗೆ  ಬಲ ಕಾಲನಿಟ್ಟು ಒಳಗೆ ಪ್ರವೇಶಿಸಿದೆ.

ದೇವಸ್ಥಾನದೊಳಗೆ ಊಹಿಸಿದಷ್ಟು ಜನರಿರಲಿಲ್ಲ. ಗಂಡಸರು, ಹೆಂಗಸರು, ಪ್ರಾಯದವರು, ಹುಡುಗಿಯರು, ಮಕ್ಕಳು ಒಂದಷ್ಟು ಜನ ತಮ್ಮಷ್ಟಕ್ಕೆ ತಾವೇ ದೇವರಿಗೆ ಪ್ರದಕ್ಷಿಣೆ ಬಂದು ತೀರ್ಥ ಪ್ರಸಾಧ ಪಡೆಯುತ್ತಿದ್ದರು. ನಾವೂ ಆಟಿ ತಿಂಗಳಲ್ಲಿ ಬರುವ ಆಟಿ ಕಳಂಜನಂತೆ ದೇವರ ಗುಡಿಗೆ ಪ್ರದಕ್ಷಿಣೆ ಬರಲು ಮುಂದೆ ಸಾಗಿದೆವು. ಮಹಾಲಿಂಗೇಶ್ವರ ದೇವಸ್ಥಾನ ಅಂದರೆ ಅಲ್ಲಿ ಪೂರ್ಣ ಪ್ರದಕ್ಷಣೆ ಬರುವುದಿಲ್ಲ. ಹಾಗಾಗಿ ಪ್ರದಕ್ಷಿಣೆ ಬರುವವರೆಲ್ಲಾ ಎದುರು ಬದುರು ಸಿಗುವುದು ಸಾಮಾನ್ಯ. ಒಂದು ಲೆಕ್ಕದಲ್ಲಿ ನಮ್ಮೊಟ್ಟಿಗೆ ಯಾರು ಯಾರು ಪ್ರದಕ್ಷಿಣೆ ಬರುತ್ತಿದ್ದಾರೆ ಅಂತ ಸುಲಭವಾಗಿ ತಿಳಿಯುತ್ತದೆ. ನಮ್ಮ ಎದುರಿನಲ್ಲಿ ಸುಮಾರು ಏಳೆಂಟು ಹದಿಹರೆಯದ ಹುಡುಗಿಯರ ದಂಡು, ಅದರ ಹಿಂದೆ ನಾವು, ನಮ್ಮ ಹಿಂದೆ ಇನ್ನೂ ಹತ್ತಾರು ಮಂದಿ. ಹೀಗೆ ಸಾಗಿತ್ತು ನಮ್ಮ ಪ್ರದಕ್ಷಿಣಾ ಸರದಿ. ಇದ್ದಕ್ಕಿದ್ದಂತೆ ನನಗೆ ಎದುರಿನಲ್ಲಿದ್ದ ಈ ಹೆಣ್ಣು ಮಕ್ಕಳತ್ತ ಗಮನ ಹರಿಯಿತು.ಯಾರಿರಬಹುದಿವರು? ನಮ್ಮೂರಿನವರೇ ಅಥವಾ ಹೊರಗಿನವರೇ? ಎಂಬ ಕಾತರ ಒಂದೆಡೆಯಾದರೆ, ನನಗೆ ಯಾರದ್ದೇ ಪರಿಚಯವಾಗುವುದಿಲ್ಲವಲ್ಲ? ಎಂಬ ತಳಮಳ ಇನ್ನೊಂದೆಡೆ. ಮತ್ತೆ ಸರಿಯಾಗಿ ದಿಟ್ಟಿಸಿ ನೋಡಿದೆ. ಟ್ಯೂಬ್ ಲೈಟ್ ಪುಕ್ ಪುಕ್ ಅನ್ನುವಂತೆ ಒಂದಿಬ್ಬರನ್ನು ಎಲ್ಲಿಯೋ ನೋಡಿದಹಾಗೆ, ಮರೆಯಾದ ನೆನಪುಗಳು  ಕಣ್ಣು ಮಯ ಮಯ ಅನ್ನುವಂತೆ, ಮೆದುಳಿನ ಸರ್ಕ್ಯುಟ್ನಲ್ಲಿ ಇನ್ನೂ ಸರಿಯಾಗಿ ಹರಿದು ಜ್ಞಾಪನ ವಲಯಕ್ಕೆ ಸರಿಯಾದ ಸಂದೇಶ ಯಾಕೋ ಕೊಡುತ್ತಿರಲಿಲ್ಲ. ಹಾಗಾಗಿ ಅವರು ಯಾರೆಂದು ಸರಿಯಾಗಿ ಗೊತ್ತಾಗಲೇ ಇಲ್ಲ. ಪ್ರದಕ್ಷಣೆ ಹೀಗೆ ಮುಂದುವರಿಯಲು, ಈ ಲಲನಾ ಮಣಿಗಳ ತಂಡ ಮತ್ತೆ ಮತ್ತೆ ನನ್ನನ್ನು ತಿರುಗಿ ತಿರುಗಿ ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ಎರಡನೆಯ ಸುತ್ತಿನಲ್ಲಿ ನಸು ನಗೆ ಬೀರಲಾರಂಭಿಸಿದರು. ನನಗೆ ಅರಿವಿಲ್ಲದಂತೆ ನನ್ನ ತುಟಿಯಿಂದಲೂ ಮುಲಾಜಿಲ್ಲದೆ ಪುಕ್ಕಟೆಯಾಗಿ ಒಂದು ಬೆದರು ನಗೆ ಹೊರ ಹೊಮ್ಮಿತು. ಈ ಹೊರ ಹೊಮ್ಮಿದ ಹುಲು-ನಗೆ ನನ್ನ ಧರ್ಮ ಪತ್ನಿಯ ಮೂಗಿನ ನೇರ ಅರ್ಜುನನ ಶಬ್ಧವೇದಿ ಬಿಲ್ಲಿನಿಂದ ಹೊರಟ ಬಾಣದಂತೆ ಕಣ್ಣು ಕುಕ್ಕಿಸಿ ಹಾದು ಹೋದಂತಾಯಿತು. ಪಾಪ ಅವಳ ಗಂಟಲು ಒಣಗಿರಬೇಕು ಒಂದೆರಡು ಒಣ ಕೆಮ್ಮು ಹೊರಬಂತು. ಈ ಕೆಮ್ಮಿನ ಶಬ್ದ ನನಗೆ ಮಾತ್ರ ಹನ್ನೆರಡು ಓಲ್ಟಿನ ಕರೆಂಟು ಇನ್ನೂರ ಇಪ್ಪತ್ತು ಓಲ್ಟಿನ ಟ್ರಾನ್ಸ್ ಫಾರ್ಮರ್ ಮೊಲಕ ಹಾದು ಎರಡು ಸಾವಿರ ಡೆಸಿಬಲ್ ಶಬ್ಧದ ಧ್ವನಿಯಾಗಿ ಮಾರ್ಪಟ್ಟು ನನ್ನ ಕಿವಿ ತಮಟೆಗೆ ಭಾರಿಸಿದಂತಾಯಿತು!

ಮೂರನೇಯ ಸುತ್ತಿನಲ್ಲಿ ಈ ಹೆಂಗಳೆಯರ ಗುಸು-ಗುಸು ಜೋರಾಯಿತು. ನಾನು ಇವರು ಎದುರು ಬದಾಗಲೆಲ್ಲಾ ಕಣ್ಣು ಮುಚ್ಚಿ ಮನಸ್ಸಿನಲ್ಲಿಯೇ ಶಿವ ಪಂಚಾಕ್ಷರಿಯ ಜಪ ಮಾಡುತ್ತಿದ್ದೆ. ನಾವು ಐದು ಸುತ್ತು ಬರುವವರೆಗೂ ಎದುರು ಸಿಕ್ಕಾಗಲೆಲ್ಲಾ ಇವರು ನನ್ನ ನೋಡಿ ನಗುತ್ತಲೇ ಇದ್ದರು! ಪ್ರದಕ್ಷಿಣೆ ಪೂರ್ಣಗೊಳಿಸಿ, ದೇವರ ಎದುರು ನಿಂತು ಶಿವ ಶಿವಾ ಕಾಪಾಡಪ್ಪಾ ಅಂತ ಕಣ್ಣು ಮುಚ್ಚಿ ಒಂದು ಕ್ಷಣ ಮೌನ ಪ್ರಾರ್ಥನೆ ಸಲ್ಲಿಸಿದೆ. ಭಟ್ರ ಮುಖವನ್ನೂ ನೋಡದೆ ತೀರ್ಥ ಪ್ರಸಾದ ತೆಗೆದುಕೊಂಡು, ಬಂದ ವಿಘ್ನಗಳನ್ನು ದೂರ ಮಾಡಲು ಗಣನಾಯಕನಿಗೆ ಹೇಳಪ್ಪಾ ಶಿವ ಶಿವಾ ಅಂತ ಕಿಸೆಗೆ ಕೈ ಹಾಗಿ ಸಿಕ್ಕಿದ್ದಷ್ಟು ನಗದು ನಾಣ್ಯಗಳನ್ನು ಆ ಪರ ಶಿವನ ಹುಂಡಿಗೆ ಹಾಕಿ ಕಣ್ಣು ಬಿಟ್ಟು ಪತ್ನಿಯ ಮುಖವನ್ನೊಮ್ಮೆ ನೋಡಿದೆ. ಹರ ಹರಾ.. ಮುಖ ಕೆಂಪೇರಿತ್ತು. ಮನೆಗೆ ಬನ್ನಿ ಕಲಿಸುತ್ತೇನೆ ಅಂತ ಅವಳೆರಡು ಕಣ್ಣುಗಳು ಹೇಳುತ್ತಿದ್ದುದು ತಿಳಿಯಲು ನನಗೇನೂ ಸಮಯ ಹಿಡಿಯಲಿಲ್ಲ!

ತಿರ್ಥ ಪ್ರಸಧದ ನಂತರ ದೇವಸ್ಥಾನದ ಎದುರಿನ ಪೌಳಿಯಲ್ಲಿ ಸ್ವಲ್ಪ ಹೊತ್ತು ಕುಳಿತೆವು. ನನ್ನ ಹೃದಯ ಆ ಪರ ಶಿವ ಢಮರು ಬಾರಿಸಿ ಶಿವ ತಾಂಡವ ನೃತ್ಯ ಮಾಡುವಂತೆ ಕಂಪಿಸುತ್ತಿತ್ತು. ಆಗ ಆ ಗುಂಪಿನಿಂದ ಒಬ್ಬಳು ಎದ್ದು ಬಂದು, ನೀವು ಶ್ರೀನಿವಾಸ ಅಣ್ಣ ಅಲ್ವಾ? ಅಂತ ಕೇಳಿಯೇ ಬಿಟ್ಟಳು. ಇದ ಕೇಳಿ ನನ್ನ ಹೃದಯದಲ್ಲಿ ಶಿವನ ಢಮರು ಬಡಿತ ಸ್ವಲ್ಪ ಮಟ್ಟಿಗೆ ನಿಂತಂತಾಯಿತು. ಬದುಕಿಸಿದೆಯ ಶಿವ ಅಂತ ನಿಟ್ಟುಸಿರೊಂದು  ನನಗೆ ಅರಿವಿಲ್ಲದಂತೆ ಬಸ್ಸಿನ ಬ್ರೇಕ್ ಸಿಲಿಂಡರಿನಿಂದ ವಾಲ್ವ್ ಮೂಲಕ ರಿಲೀಸ್ ಆದ ಗಾಳಿಯಂತೆ ಟುಸ್ ಸ್ ಸ್ ... ಅಂತ ಹೊರ ಬಂತು. ಹೌದು ನೀವು ಯಾರು? ಎಂದು ಮರು ಪ್ರಶ್ನೆ ಹಾಕಿದೆ. ನನ್ನ ಗುರ್ತ ಆಗಲಿಲ್ಲವಾ? ಗೆಸ್ ಮಾಡಿ ನೋಡುವಾ ಅಂತ ಮರು ಸವಾಲು ಹಾಕಿ, ಇವರೋಟ್ಟಿಗಿದ್ದವರೆಲ್ಲರೂ ಬಂದು  ಕೋರಸ್ ಹಾಡಿದ್ರು. ನಾನೇನೂ ಕಮ್ಮಿಯಾ? ಕವಿತಾ, ಸುನೀತ, ಕಾವ್ಯ, ಆಶಾ, ಉಷಾ ಎಲ್ಲರ ಗುರ್ತ ನನಗಿದೆ. ನೀವು ನನಗೆ ಮಂಗ ಮಾಡುವುದು ಬೇಡ ಅವರ ಅಪ್ಪಂದಿರ ನೆನಪೂ ಇದೆ ಕಾಮತರು, ಸೀನಣ್ಣ, ರಾಘಣ್ಣ, ಗೋಪಾಲಣ್ಣ, ರಮೇಶಣ್ಣ ..... ಅನ್ನುವಷ್ಟರಲ್ಲಿ... ಭಲೇ ನೀವೇ! ನಿಮಗಿನ್ನೂ ಮರೆತಿಲ್ವಾ? ನಾನೇ ಕಾಮತರ  ಮಗಳು ಎಂದು ಹುಬ್ಬೇರಿಸಿದಳು ಕಾವ್ಯ. ಹೌದು ಸುಮಾರು ಹದಿನೈದು ವರ್ಷಗಳ ಹಿಂದೆ, ನಾನು ನನ್ನ ಆಟೋದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಪುಟ್ಟ ತುಂಟಿಯರೇ ಈ ಹುಡುಗಿಯರು. ಬನ್ನಿಯೇ ನಮ್ಮ ಮನೆಗೆ ಹೋಗೋಣ. ಅಪ್ಪ ಅಮ್ಮ ನಿಮ್ಮ ಬಗ್ಗೆ ಯಾವಾಗಲೂ ಮಾತನಾಡ್ತಾ ಇರ್ತಾರೆ ಅಂತ ಒಬ್ಬಳು ಹೇಳಿದರೆ ದುಬೈನಿಂದ ಬರುವಾಗ ನಮಗೆ ಏನು ತಂದಿದ್ದೀರಿ ಅಂತ ಇನ್ನೊಬ್ಬಳು. ಹೀಗೆ ನಡೆದಿತ್ತು ಮಾತುಕತೆ.......

ಸಂಬಂಧಗಳು ಅಂದರೆ ಹೀಗೆ ಅಲ್ಲವೇ?

 

 

Saturday, September 21, 2013

ಭಾವನೆಗಳು.


ವಿಪರ್ಯಾಸ


ಸಣ್ಣ ಕತೆ.


ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಒಬ್ಬ ಯುವಕನಿದ್ದ. ಅವನ ಹೆಸರು ಎಕ್ಸ್. ಹದಿ ಹರೆಯದ ಅವನು ತುಂಬಾ ಹೆಣ್ಣು ಪ್ರಿಯ. ದಿನಾ ಕಾಲೇಜು ಬಿಡುವಾಗ ಹುಡುಗಿಯರಿಗಾಗಿ ಕಾಲೇಜಿನ ಸಮೀಪ ಇರುವ ಬಸ್ಸು ನಿಲ್ದಾಣದಲ್ಲಿ ಹುಡುಗಿಯರಿಗಾಗಿ ಕಾಯುತ್ತಿದ್ದ. ದಿನ ಕಳೆದಂತೆ ಹೇಗೂ ಮಾಡಿ ಒಂದು ಹುಡುಗಿಯನ್ನು ತನ್ನ ಬಲೆಗೆ ಹಾಕಿ ಬುಟ್ಟಿಯಲ್ಲಿಟ್ಟು ಬಿಟ್ಟ. ಅವಳ ಹೆಸರು ವೈ. ವೈ ಬಲೆಗೆ ಬಿದ್ದದ್ದೇ ತಡ ದಿನಾ ಅವಳಿಗಾಗಿ ಕಾಲೇಜು ಬಿಡುವಾಗ ಬಸ್ಸು ನಿಲ್ದಾಣದಲ್ಲಿ ಕಾಯುವ ಕಾಯಕ ಮಾಡುತ್ತಿದ್ದ. ಕಾಲ ಸರಿದಂತೆ ಅವಳನ್ನು ತನ್ನ ಬೈಕಿನಲ್ಲಿ ಕುಳ್ಳಿರಿಸಿ ಅವಳ ಮನೆಯ ಪಕ್ಕದ ಬಾಕೆರ್ ಗದ್ದೆಯ ಬಳಿ ಬಿಡುತ್ತಿದ್ದ. ಇದನ್ನು ಕೆಲವು ಉರಾಚಿನವರು ನೋಡಿ ಗುಸು-ಗುಸು ಸುದ್ಧಿ ಹರಡಿಸಿ ಹುಡುಗಿಯ ಮನೆಯವರಿಗೆ ಬುಸು ಬುಸು ಮಾಡುವಂತೆ ಮಾಡಿದ್ದು ಈಗ ಹಳೇ ನೆನಪು.

 ಎಕ್ಸ್ ಗೊಬ್ಬ ಹಾಯ್ ಬಾಯ್ ಗೆಳೆಯನಿದ್ದ. ಯಾವಾಗಲು ಎಕ್ಸ್ ತನ್ನ ಡೌ ಬಗ್ಗೆ ಗೆಳೆಯನಲ್ಲಿ ಕೊಚ್ಚಿ ಕೊಳ್ಳುತ್ತಿದ್ದ. ತಾನೊಬ್ಬ ಹೀರೋ ಎಂಬಂತೆ ಪೋಸು ಕೊಡುತ್ತಿದ್ದ. ಒಂದು ದಿನ ಹಾಯ್ ಬಾಯ್ ಗೆಳೆಯನನ್ನೂ ಬೈಕ್ ನಲ್ಲಿ ಕುಳ್ಳಿರಿಸಿ ತನ್ನ ಪ್ರಿಯತಮೆಯನ್ನು ತೋರಿಸುತ್ತೇನೆಂದು ಕರೆದುಕೊಂಡು ಹೋಗಿ ಕಾಲೇಜಿನ ಹತ್ತಿರದ ಬಸ್ಸು ತಂಗುದಾಣದಲ್ಲಿ ಕಾಯ ತೊಡಗಿದ. ಎಂದಿನಂತೆ ಕಾಲೇಜು ಮುಗಿಸಿ ಆ’ ವೈ’ ಲಲನಾಮಣಿ ತನ್ನ ಗೆಳತಿ ‘ಹರಿಣಿ’  ಜತೆಗೆ ದೂರದಿಂದ ಬರುತ್ತಿದ್ದುದನ್ನು ಹಾಯ್ ಬಾಯ್ ಗೆಳೆಯನಿಗೆ ಎಕ್ಸ್ ತೋರಿಸಿತ್ತಾನೆ. ಲಲನಾಮಣಿಗಳು ಹತ್ತಿರ ಬರುತ್ತಿದ್ದಂತೆ ಅದರಲ್ಲಿ ಚಿನ್ನದ ಬಣ್ಣದ ಡ್ರೆಸ್ ನೊಂದಿಗೆ ಆಕಾಶ ಬಣ್ಣದ ಶಾಲು ಹಾಕಿಕೊಂಡವಳೆ ನನ್ನವಳು ಎಂದು ತುಟಿಯಲ್ಲೊಂದು ನಾಚಿದ ನಗು ಬೀರಿ ಎಕ್ಸ್ ಉಲಿಯುತ್ತಾನೆ. ವ್ಹಾವ್ ಚೆನ್ನಾಗಿದ್ದಾಳೆ ಕಣೋ, ಬ್ಯುಟಿಫುಲ್ ಎಂದು ಹಾಯ್ ಬಾಯ್ ಗೆಳೆಯ ಎಕ್ಸ್ ಗೆ ಹೇಳುತ್ತಾನೆ. ಈಗ ಎಕ್ಸ್ ನಿಜವಾದ ಹೀರೋನಂತೆ ತಲೆ ಎತ್ತಿ ಇದಕ್ಕೆಲ್ಲ ‘ಡೆರಿಂಗ್’ ಬೇಕು ಕಣೋ ಎಂದು ಎದೆ ತಟ್ಟುತ್ತಾನೆ. ಹೌದ.. ಲೈನ್ ಹೊಡೆಯಲು ಡೆರಿಂಗ್ ಬೇರೆ ಬೇಕಾ.. ಅಂತ ಹಾಯ್ ಬಾಯ್ ಪ್ರತ್ಯುತ್ತರ ಕೊಡುತ್ತಾನೆ. ನಿನ್ನಲ್ಲಿ ಡೆರಿಂಗ್ ಇದ್ದರೆ ನೀನೂ ಅವಳೊಟ್ಟಿಗೆ ಇರುವ ‘ಹರಿಣಿಗೆ’ ಲೈನ್ ಹೊಡೆದು ತನ್ನ ಬುಟ್ಟಿಗೆ ಹಾಕಿ ತೋರಿಸು ಅಂತ ಸವಾಲನ್ನು ಹಾಕಿ,  ಒಂದು ಪುಕ್ಕಟೆ ಸಲಹೆಯನ್ನೂ ಕೊಡುತ್ತಾನೆ. ಇತ್ತ ಪುಕ್ಕಟೆ ಸವಾಲು ಸಲಹೆಗೆ ನಾಚಿ ನೀರಾದ ಹಾಯ್ ಬಾಯ್ ಗೆಳೆಯ ಒಳಗಿಂದೊಳಗೆ ಆಶೆ ಎದ್ದರೂ, ಬೇಡ ಮಾರಾಯ ನನ್ನಿಂದ ಆ ಕೆಲಸ ಆಗದು ಅಂತಾನೆ. ಅದಕ್ಕೇ ಹೇಳಿದ್ದು ಡೆರಿಂಗ್ ಬೇಕು ಕಣೋ ಎಂದು, ಅಂತ ಮತ್ತೊಮ್ಮೆ ತಮಾಷೆ ಮಾಡಲು ಎಕ್ಸ್ ಮರೆಯುದಿಲ್ಲ.

ಹೌದು, ಹರಿಣಿ ಕೂಡಾ ಸುಂದರ ಲಕ್ಷಣವಾಗಿಯೇ ಇದ್ದಾಳೆ. ಮರೂನ್ ಬಣ್ಣದ ಚೂಡಿದಾರ್ ಉಟ್ಟು ಬಿಳಿ ಬಣ್ಣದ ದುಪ್ಪಟ ಹಾಕಿ ಮೋಹಕ ನಗೆಯೊಂದಿಗೆ ಕಂಡ ಆ ಕ್ಷಣ ಹಾಯ್ ಬಾಯ್ ಗೆ ಮರೆಯಲು ಆಗಲೇ ಇಲ್ಲ. ಹಗಲೂ ರಾತ್ರಿ ಅವಳದೇ ನೆನಪನ್ನು ಮೆಲುಕು ಹಾಕುತ್ತಾ ತನಗೂ ಏಕಾಂತ ಡೌ ಆಗಿದೆ ಅಂತ ತಿಳಿಯಲು ಅವನಿಗೆ ಸಮಯ ಹಿಡಿಯುವುದಿಲ್ಲ. ಆದರೆ ಏನು ಮಾಡುವುದು. ನೇರ ಹೋಗಿ ಅವಳಲ್ಲಿ ಮಾತನಾಡುವ ಧೈರ್ಯ ಅವನಲ್ಲಿರಲಿಲ್ಲ. ಏಕಾಂತ ಪ್ರೀತಿಗೆ ತೊಡಗುತ್ತಾನೆ. ರಾತ್ರಿ ಹಗಲು ಅವಳದ್ದೇ ಧ್ಯಾನ, ಅವಳದ್ದೇ ಕನಸು. ಸರಿಯಾಗಿ ನಿದ್ದೆಯೂ ಇಲ್ಲ. ಹೀಗಿರುವಾಗ ಒಂದು ದಿನ ಅವನಿಗೊಂದು ಕೆಲಸದ ಅಫಾರ್ ಬರುತ್ತದೆ. ಊರು ಬಿಟ್ಟು ದೂರ ಹೋಗುತ್ತಾನೆ.ಹೊಸ ಪರಿಸರ, ಹೊಸ ಚೊಚ್ಚಲ ಕೆಲಸವಾದ್ದರಿಂದ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಕ್ರಮೇಣ ಹರಿಣಿಯ ನೆನಪು ಮನಸ್ಸಿನಿಂದ ಡಿಲೀಟ್ ಆಗಿ ಹೋಗುತ್ತದೆ.

 ಸರಿ ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ. ಇತ್ತ  ‘ಎಕ್ಸ್’ ‘ವೈ’ ಳನ್ನು ವರಿಸಿ ಎಕ್ಸ್ ವೈ ಜೆಡ್ ಆದ ಬಗ್ಗೆ ಮಾಹಿತಿ ಇತ್ತು. ಆದರೆ ಹರಿಣಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹಾಯ್ ಬಾಯ್ ಆ ಬಗ್ಗೆ ಚಿಂತನೆಯನ್ನೂ ಮಾಡಿರಲಿಲ್ಲ. ಅವನೂ ಮದುವೆಯಾಗಿ ಸೆಟಲ್ ಆಗಿದ್ದ.

ಒಮ್ಮೆ ಇದ್ದಕ್ಕಿದ್ದಂತೆ  ಹಾಯ್ ಬಾಯ್ ಗೆ, ಹಲೋ ಎಂಬ ಒಂದು ಸಂದೇಶ ಬರುತ್ತದೆ. ಅವನಿಗೆ ಸಂದೇಶ ಕಳುಹಿಸಿದವರು ಯಾರು ಎಂದು ಗೊತ್ತಿಲ್ಲದಿದ್ದರೂ ಹಲೋ ಅಂತ ಪ್ರತಿ ಸಂದೇಶ ಕಳುಹಿಸುತ್ತಾನೆ. ಹೀಗೆ ಸಹಜ ಮಿತ್ರತ್ವದ ಸಂದೇಶಗಳು ಆಗೊಮ್ಮೆ ಈಗೊಮ್ಮೆ ರವಾನೆಯಾಗುತ್ತಿದ್ದವು. ಎದುರಿನಿಂದ ಸಂದೇಶ ಕಳುಹಿಸುವವಳು ‘ಸಹನಾ’ ಅಂತ ತನ್ನ ಹೆಸರನ್ನು ಹೇಳಿಕೊಂಡಿದ್ದಳು. ಸಹನಾ ಒಂದು ದಿನ ಸಂದೇಶದಲ್ಲಿ ನಿನಗೆ ‘‘ಎಕ್ಸ್’ ನ  ಪರಿಚಯ ವಿದೆಯಾ? ಎಂದು ಕೇಳುತ್ತಾಳೆ. ಯಾಕೆ ಅಂತ ಪ್ರತ್ಯುತ್ತರ ಹೋಗುತ್ತೆ. ಯಾಕಿಲ್ಲ, ಅವನು ನನ್ನ ಕಾಲೇಜು ಗೆಳತಿ ‘’ವೈ’’ ನ ಪತಿ. ವೈ  ನನಗೆ ಸಿಗದೆ ತುಂಬಾ ವರ್ಷಗಳಾಗಿವೆ. ನೀವು ಅದೇ ಊರಿನವರೆಂದು ತಿಳಿದು ನಿಮ್ಮಲ್ಲಿ ಕೇಳಿದೆ ಬೇಸರಿಸ ಬೇಡಿ ಅಂತ ಉತ್ತರ ಬರುತ್ತೆ. ಹೌದು ನನಗೆ ‘ಎಕ್ಸ್’ ನ  ಪರಿಚಯವಿದೆ ಎಂದು ಸಂಪರ್ಕ ವಿಳಾಸ ಕೊಡುತ್ತಾನೆ.

ಇತ್ತ, ಎಕ್ಸ್ ಮೂಲಕ ಗೊತ್ತಾಗುತ್ತದೆ ಸಹನಾ ತಾನು ಹದಿ ಹರೆಯದಲ್ಲಿದ್ದಾಗ ಏಕಾಂತ ಪ್ರೀತಿಯ ಚಾದರ ಹೊದ್ದು ಮಲಗಿಸುವಂತೆ ಮಾಡಿದ ಹರಿಣಿ ಎಂದು! ಆದರೆ ಹರಿಣಿಗೆ ಮಾತ್ರ ಇನ್ನೂ ಗೊತ್ತೇ ಇಲ್ಲ ತಾನು ಸಂದೇಶ ಕಳುಹಿಸಿದ ಗೆಳೆಯ ಯಾರು ಎಂದು!  ಯಾಕೆಂದರೆ ಅವಳು ನನ್ನನ್ನು ಎಂದೆಂದೂ ನೋಡಿಯೇ ಇರಲಿಲ್ಲ! ಇದೇ ಜೀವನದ ಸೋಜಿಗವಲ್ಲವೆ?
 
ಸ್ಪೂರ್ತಿ ಬಂಟಕಲ್ಲು.
 
 

Monday, September 16, 2013

ನಿಟ್ಟುಸಿರು

 
ಬಾನಂಗಳದಿ,
ಕಾರ್ಮೋಡ ಮುಸುಕಿ,
ತಂಗಾಳಿಯೊಡನೆ 
ಬೆಸೆದ ಸುಖದಿಂ-
ಸ್ಕಲಿತ,
ಎರಡು ನೀರ
ಹನಿಗಳು, 
ಭುವಿಯಂಗಳದಿ
ಪ್ರಕೃತಿ ಚೆಲ್ಲಿದ
ಬೀಜಗಳ ಮೇಲುದುರಿ,
ಬಸುರಾಗಿ, ಹಸಿರ
ಉಸಿರು ಬಿಟ್ಟಾಗ,
ರೈತನೋಡಲು ತಣಿದು,
ದನ-ಕರು,
ಮೂಕ ಪ್ರಾಣಿಗಳ
ಮುಖವನೊಮ್ಮೆ ನೋಡಿ
ಬಿಟ್ಟ ಉಸಿರು!

ಸ್ಪೂರ್ತಿ
ಬಂಟಕಲ್ಲು