Thursday, July 17, 2014

ರಕ್ತ ಶುದ್ಧಿಗೊಂದು ಹಿತ್ತಲ ಸಂಜೀವಿನಿ



ದಾಸವಾಳ

ಮಾನವನ ರಕ್ತ ತ್ವರಿತಗತಿಯಲ್ಲಿ ಶುದ್ಧ ಮಾಡುವ ಏಕೈಕ ಸಸ್ಯ ಸಂಜೀವಿನಿ ಅದು ನಮ್ಮ ನಿಮ್ಮ ಮನೆ ಹಿತ್ತಲಲ್ಲಿ ಖರ್ಚಿಲ್ಲದೆ ಬೆಳೆಸಿ ಬಳಸಬಹುದಾದ ದಾಸವಾಳ.ದಾಸವಾಳದಲ್ಲಿ ಹಲವು ಬಣ್ಣಗಳಿವೆ.ಅದರಲ್ಲಿ ಬಿಳಿ ದಾಸವಾಳ ಎಲ್ಲಾ ರೋಗಕ್ಕೂ ಕಾರಣವಾದ ರಕ್ತ ಮಲಿನತೆ ನಿವಾರಿಸುವ ಗುಣ ಹೊಂದಿದೆ.ದಾಸವಾಳದ  ಎಲೆ ಮತ್ತು ಹೂವಿನಲ್ಲಿ ನೂರಾರು  ಬಗೆಯ ಆರೋಗ್ಯಕರ ಗುಣವಿದೆ. ದಾಸವಾಳದ ಹೂವಿನಲ್ಲಿ anti oxidants ಗುಣ ಅಧಿಕವಿದ್ದು ಈ ಹೂವನ್ನು ಇದರ ಎಲೆಗಳನ್ನು ಬಳಸಿ ಆರೋಗ್ಯ ವೃದ್ಧಿಸಬಹುದು.

ದಾಸವಾಳದ ನಿರಂತರ ಸೇವನೆಯಿಂದ, ಹಾಗೂ ಬಳಕೆಯಿಂದ ದೇಹದ ರಕ್ತ ಶುದ್ಧಿ, ಹೊಟ್ಟು ನಿವಾರಣೆ, ಕಾನ್ಸೆರ್ ತಡೆಗಟ್ಟುವಿಕೆ, ಹೆಂಗಸರ ಮುಟ್ಟಿನ ಸಮಸ್ಯೆ ನಿವಾರಣೆ, ಶೀತ, ಕೆಮ್ಮು, ತಲೆನೋವುಗಳ ಉಪಶಮನ, ಶುಕ್ರವುದ್ದಿ, ಹೃದಯ ಸಂಬಂಧಿ ತೊದರೆ ನಿವಾರಣೆ, ಬೊಜ್ಜು ಕರಗುವಿಕೆ ಮುಂತಾದ  ಪ್ರಯೋಜನ ಪಡೆಯಬಹುದು.

ಬಳಸುವ ಸರಳ ವಿಧಾನ:

ನಾವು ನಿತ್ಯ ಮಾಡುವ ಇಡ್ಲಿ, ದೋಸೆ, ಕಡುಬು ಇತ್ಯಾದಿ ಖಾದ್ಯಕ್ಕೆ ಅಕ್ಕಿ ರುಬ್ಬುವಾಗ ಅದರಲ್ಲಿ ದಾಸವಾಳದ ಸೊಪ್ಪು, ಇದ್ದರೆ ಹೂವು ಕೂಡ ಚೆನ್ನಾಗಿ ತೊಳೆದು ಹಾಕಿ ರುಬ್ಬಿ ಇಡ್ಲಿ, ದೋಸೆ, ಕಡುಬು ಮಾಡಿ ಸೇವಿಸುವುದು ಸುಲಭ ಹಾಗೂ ಸರಳ ವಿಧಾನ.
ಎಲೆ, ಹೊವು ಯಾ ಬೇರಿನ  ಕಷಾಯ ಮಾಡಿ ಕುಡಿಯುವುದು.
ಸೊಪ್ಪು ಮತ್ತೆ ಹೂವು ಅರೆದು ತಲೆಗೆ ಹಾಕಿ ಎರಡು ಮೂರು ತಾಸು ಬಿಟ್ಟು ಮಿಯುವುದು.

ಇಂತಹ ಗಿಡ ಮೂಲಿಕೆಗಳನ್ನು ನಿರಂತರ ಬಳಸಿದರೆ ವೈದ್ಯರಿಗೆ ಚೆಲ್ಲುವ ಸಾವಿರಾರು ರೂಪಾಯಿ ಉಳಿಸಬಹುದು. ಜಮೀನಿಲ್ಲದವರಿಗೆ ಬೆಳೆಸಿ ಒದಗಿಸಲು ರೈತರಿಗೆ ಪ್ರೋತ್ಸಾಹಿಸಿ, ಆಸ್ಪತ್ರೆಗೆ ಚೆಲ್ಲುವ ಹಣದ ಒಂದಿಷ್ಟು ಪಾಲು ರೈತರಿಗೆ ಚೆಲ್ಲಿ ಅವರಿಂದ ಬೆಳೆಸಿ, ಖರೀದಿಸಿ, ಬಳಸಿ  ಆರೋಗ್ಯವಂತರಾಗಿ ಬದುಕ ಕಟ್ಟಿ ಬದುಕೋಣ.

ಶ್ರೀನಿವಾಸ್ ಪ್ರಭು
ಸ್ಪೂರ್ತಿ, ಬಂಟಕಲ್ಲು


Thursday, July 10, 2014

ದೊಡ್ಡ ಪತ್ರೆ



ದೊಡ್ಡ ಪತ್ರೆ (ಸಂಬಾರ ಬಳ್ಳಿ )

ಸಂಬಾರ ಬಳ್ಳಿ ಒಂದು ಔಷಧಿ ಗುಣವುಳ್ಳ ಬಳ್ಳಿ. ಸಾಮಾನ್ಯವಾಗಿ ಮನೆ ಹಿತ್ತಲು, ಅಂಗಳ, ಅಥವ ಪೇಟೆಗಳಲ್ಲಿ ಕುಂಡದಲ್ಲಿಯೂ ಬೆಳೆಸಬಹುದು. ಆಯುರ್ವೇದದಲ್ಲಿ ಇದನ್ನು ದೊಡ್ಡ ಪತ್ರೆ ಅಂತಲೂ  ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ಕುಬಾನ್ ಒರೆಗನೋ ಅಥವಾ ಪ್ಲೆಕ್ಟ್ರಂಥಸ್ ಅಂಬೋನಿಕಸ್ (Cuban oregano or Plectranthus Amboinicus) ಎಂದು ಕರೆಯುತ್ತಾರೆ.

ಶೀತ, ವಾತ, ಪಿತ್ತ, ಕಫಾ, ನೆಗಡಿ, ತಲೆ ಭಾರ ಇತ್ಯಾದಿಗಳ ನಿವಾರಣೆಗೆ ರಾಮಬಾಣ. ಬಹು ಉಪಯೋಗಿ ಈ ಬಳ್ಳಿಯ ಎಲೆಗಳಿಂದ ಹಲವಾರು ಖಾದ್ಯವನ್ನೂ ತಯಾರಿಸಬಹುದು.

ಶೀತ, ವಾತ, ಪಿತ್ತ, ಕಫಾ, ನೆಗಡಿ, ತಲೆ ಭಾರ ಆದಾಗ, ಒಂದು ಹಿಡಿ ಸಬಾರ ಬಳ್ಳಿ ಸೊಪ್ಪು ತಂದು, ಬಾಣಲೆಯಲ್ಲಿ ಮಂದ ಉರಿಯಲ್ಲಿ ಸ್ವಲ್ಪ ಬಾಡಿಸಿ, ಕೈ ಅಂಗುಲಗಳಿಂದ  ಚೆನ್ನಾಗಿ ರುಬ್ಬಿ ಅದರ ರಸ ಮಕ್ಕಳಿಂದ ಹಿಡಿದು ಮುದುಕರವರೆಗೆ ಸೇವಿಸುವಂತೆ ಮಾಡುವುದರಿಂದ ಎಲ್ಲವೂ ಉಪಶಮನಕ್ಕೆ ಬರುತ್ತದೆ.ಅದೇ ರಸ ಒಂದು ಚಮಚದಲ್ಲಿ ಹಾಕಿ ಹದಾ ಉಗುರು ಬಿಸಿ ಮಾಡಿ ಮಕ್ಕಳ ನೆತ್ತಿಗೆ ಹಾಕುವುದರಿಂದ ಶೀತ ಜ್ವರ ಕಡಿಮೆಯಾಗುತ್ತದೆ. ಮಳೆಗಾಲದಲ್ಲಂತೂ ಇದರ ಉಪಯೋಗ ಮಾಡಲೇ ಬೇಕು.

ನಾವು ಬೇಳೆ ಚಟ್ನಿ ಮಾಡುವಂತೆ ಸಂಬಾರಬಳ್ಳಿ ಎಲೆಗಳನ್ನು ಬಾಡಿಸಿ ಚಟ್ನಿ ಮಾಡಿದರೆ ಅದು ತುಂಬಾ ರುಚಿಯಾಗಿರುತ್ತದೆ. ಇದೇ ರೀತಿ ತಂಪು ಹುಳಿ ಮಾಡಿ ಊಟದಲ್ಲಿ ಸೇವಿಸಬಹುದು. ಕೇವಲ ಒಂದಷ್ಟು ಎಲೆ, ಒಂದು ಲಿಂಬೆ ರಸ, ಹಸಿ ಮೆಣಸು, ಶುಂಟಿ, ಬೆಳ್ಳುಳ್ಳಿ, ಇತ್ಯಾದಿ ಸೇರಿಸಿ ಚೆನ್ನಾಗಿ ರುಬ್ಬಿ ಚಟ್ನಿ ಮಾಡಿ ತಂಗಳಾನ್ನ (ಫ್ರಿಜ್) ಪೆಟ್ಟಿಗೆಯಲ್ಲಿಟ್ಟು ಊಟದ ಹೊತ್ತಿಗೆ ಚಟ್ನಿಯಂತೆಯೂ ಅಥವಾ ಒಂದು ಚಮಚ ಒಂದು ಲೋಟ ಮಜ್ಜಿಗೆಯಲ್ಲಿ ಬೆರೆಸಿದಾಗ ಧಿಡೀರ್ ತಂಪು ಹುಳಿ ತಯಾರಾಗುತ್ತೆ. ಊಟಕ್ಕೂ ತುಂಬಾ ರುಚಿ ಕೊಡುತ್ತೆ ಆರೋಗ್ಯವೂ ಚೆನ್ನಾಗಿರುತ್ತೆ.

ನಾವು ಗೆಣಸು, ಬದನೆ, ಬಾಳೆ ಕಾಯಿ ಪೋಡಿ (ಭಾಜಿಯಾ) ಮಾಡಿದ ಹಾಗೆ ಸಾಂಬಾರ ಬಳ್ಳಿ ಎಲೆ ಪೋಡಿ ಮಾಡಿದರೆ ತಿನ್ನಲು ತುಂಬಾ ರುಚಿಯಾಗಿರುತ್ತೆ. ಇದು ಜೀರ್ಣಕಾರಕವೂ ಹೌದು. ಊಟದ ಹೊತ್ತಿಗೂ ಪೋಡಿ ವ್ಯಂಜನವಾಗಿ ಬಳಸಬಹುದು. ದೊಡ್ಡ ಮಟ್ಟದಲ್ಲಿ ಬೆಳೆದು ಮದುವೆ, ಮುಂಜಿ ಇತ್ಯಾದಿಗಳ ಊಟದಲ್ಲಿಯೂ ಬಳಸಬಹುದು. ಎಣ್ಣೆಯಲ್ಲಿ ಕರಿದದ್ದರಿಂದ ಮಕ್ಕಳಿಗೂ ಇಷ್ಟವಾಗುತ್ತೆ. ನಾವು ಎಲ್ಲೇ ಇದ್ದರೂ ಒಂದು ಸಂಬಾರಬಳ್ಳಿ ಗಿಡ ನಮ್ಮ ಮನೆಯಲ್ಲಿ ಇರುವಂತೆ ನೋಡಿಕೊಂಡರೆ ಉತ್ತಮ. ನಾವು ದಿನಾ ಚಹ ಮಾಡುವಾಗ ಬೇಂದ ಚಹ ಹುಡಿ ಗಾಳಿಸಿ ಬಿಸಿ ಆರಿದಾಗ ಕುಂಡಕ್ಕೆ ಹಾಕಿದರೆ ಕುಂಡದಲ್ಲಿನ ಗಿಡ ಚೆನ್ನಾಗಿ ಬೆಳೆಯುತ್ತೆ ಅದಕ್ಕೆ ಯಾವುದೇ ಗೊಬ್ಬರದ ಅಗತ್ಯ ಬರುವುದಿಲ್ಲ. ಮಳೆಗಾಲದಲ್ಲಿ ಶೀತ ಜ್ವರ ಬಂದಾಗ ನಮ್ಮೂರ ಡಾಕ್ಟ್ರ ಮಕ್ಕಳಿಗೂ ಅವರಜ್ಜಿ ಕೊಡುತ್ತಿದ್ದುದು ಸಂಬಾರ ಬಳ್ಳಿಯ ಮದ್ದೇ! ಹಿತ್ತಳಗಿಡ ಮದ್ದಲ್ಲ ಅನ್ನುವ ಮಾತೊಂದಿದೆ ಆದರೆ ಸಾಯುವ ಹೊತ್ತಿಗೆ ಸಂಜೀವಿನಿ ಹುಡುಕುವುದಕ್ಕಿಂತ, ಸಾಯುವತನಕ ಆರೋಗ್ಯವಂತರಾಗಿರಲು ಈ ಹಿತ್ತಲ ಸಂಜೀವಿನಿಯನ್ನೇ ಉಪಯೋಗಿಸೋಣ.

ಶ್ರೀನಿವಾಸ್ ಪ್ರಭು
ಸ್ಪೂರ್ತಿ, ಬಂಟಕಲ್ಲು.



Tuesday, July 1, 2014

ನೀರ ಹನಿ

ಮಳೆಗಾಲ ಬಂದಿದೆ. ಹಿಂದೆಯೂ ಬಂದಿತ್ತು ಮುಂದೆಯೂ ಬರುತ್ತದೆ. ಆದರೆ ಕತೆ ಮಳೆಯದ್ದಲ್ಲ. ಬೇಸಿಗೆಯಲ್ಲಿ ಕೊಡ ಹಿಡಿದು ಸರಕಾರದ ಮುಂದೆ ಧರಣಿಗೆ ಕುಳಿತುಕೊಳ್ಳುವ ಆದುನಿಕ ಮಾನವನ ಮೂಢತೆಯ ಮೂರ್ಖತೆ. ನಮ್ಮಲ್ಲಿ ನೂರೈವತ್ತು ಕೋಟಿ ಜನರಿದ್ದಾರೆ. ಈ ನೂರೈವತ್ತು ಕೋಟಿ ಜನರಲ್ಲಿ ಸುಮಾರು ಅರ್ಧದಷ್ಟು ಜನರು ವರುಣನು ಪುಕ್ಕಟೆಯಾಗಿ ಸುರಿದ ಮಳೆಯಿಂದ ಹಿಡಿದು ಒಂದೊಂದು ಕೊಡಪಾನ ನೀರನ್ನು ಭೂಮಿಯ ಒಳಗೆ ಸುರಿದು ಬಿಟ್ಟರೆ......, ಪ್ರತೀ ಶಾಲೆಯ ಮಕ್ಕಳು ಪ್ರತೀ ದಿನ ಮಳೆಗಾಲದಲ್ಲಿ ಒಂದೊಂದು ಕೊಡಪಾನ ನೀರನ್ನು ಭೂ ಒಡಲಿಗೆ ಸೇರಿಸುವ ಪುಣ್ಯದ ಪಾಠ ಕಲಿತು ಬಿಟ್ಟರೆ...., ಪ್ರತೀ ಪಟ್ಟಣ, ಹಳ್ಳಿಗಳಲ್ಲಿ ಹರಿದು ಹೋಗುವ ಮಳೆನೀರು ಇಳೆಗೆ ಸೇರಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡರೆ... ಖಂಡಿತಾ ಕೊಡ ಹಿಡಿದು ಸರಕಾರಿ ಬಾಗಿಲ ಮುಂದೆ ನಿಲ್ಲುವ ಪ್ರಮೇಯವೇ ಇರಲಿಕ್ಕಿಲ್ಲ. ಬದಲಾಗಿ ಇಡೀ ಪ್ರಪಂಚವೇ ನಮ್ಮತ್ತ ಕಣ್ಣು ಮಿಟಿಕಿಸಿ ನೋಡುವಂತಾಗಬಹುದು. ಕೋಟಿ ಕೋಟಿ ಹಣ ಸುರಿದು ಖಜಾನೆ ಬರಿದು ಮಾಡುವ ಬದಲು ಕೇವಲ ಶಾಲಾ ಮಕ್ಕಳಿಂದ ಹಾಗೂ ರೈತರಿಂದ ಸಹಾಯ ಧನ ಒದಗಿಸಿ ಈ ಕೈಂಕರ್ಯ ಮಾಡಿಸಬಹುದು. ರೈಲು ತಡೆ, ರಸ್ತೆ ತಡೆ, ಆ ತಡೆ, ಈ ತಡೆ  ಮಾಡುವ ಬದಲು ಹರಿಯುವ ನೀರಿನ ತಡೆ ಮಾಡಿದರೆ ಏಷ್ಟೋ ಜನರ ಗಂಟಲು ಪಸೆಯಾಗಬಹುದಲ್ಲವೇ? ನಾವು ಭಾರತೀಯರು. ಮರೆತ ಸಂಸ್ಕಾರ ಮತ್ತೊಮ್ಮೆ ಕಲಿತು ಕಲಿಸಿ ಮುಂದುವರಿಸುವ ಅಗತ್ಯತೆ ಇದೆ ಎಂದು ಭಾವಿಸುತ್ತಿಲ್ಲವೇ?