Saturday, June 22, 2013

ಸ್ವರ್ಗದ ಬಾಗಿಲು.






ನಾನು ಎಂಟನೆಯ ತರಗತಿಯಲ್ಲಿರುವಾಗ ನಮ್ಮ ತಂದೆಯವರು ತೀರಿದ್ದರು. ಆಗ ನಮ್ಮ ಊರಲ್ಲಿ ಕೊರತೆ ಕಂಡು ಬಂದದ್ದು ಸಾರ್ವಜನಿಕ ಸ್ಮಶಾನ. ಅಂದಿನಿಂದಲೇ ಊರಿಗೊಂದು ಸ್ಮಶಾನ ಆಗಬೇಕು ಎಂದು ಸಂಕಲ್ಪ ಮಾಡಿದ್ದೆ. ನಾನಿನ್ನೂ ಎಳೆಯನಾದುದರಿಂದ ಸ್ಮಶಾನಕ್ಕೆ ಜಾಗ ಹೇಗೆ ಮಾಡುವುದು ಎಂಬ ಅರಿವು ಇರಲಿಲ್ಲ. ಆಗ ನನಸಹಾಯಕ್ಕೆ ಬಂದದ್ದು ಊರಿನ ಗೋಪಾಲ ಮಾಷ್ಟ್ರು. ಒಂದಷ್ಟು ಅರ್ಜಿ ಬರೆದು ಕೊಟ್ಟರು, ಅವುಗಳನ್ನು ತಾಲುಕು ಕಛೇರಿ, ಪಂಚಾಯತು ಆಫೀಸುಗಳಿಗೆ ಕೊಟ್ಟದ್ದು ಆಯಿತು. ವರ್ಷ ಕಳೆದರೂ ಏನೊಂದು ಕೆಲಸ ಆಗಲೇ ಇಲ್ಲ ಉತ್ತರವೂ ಇಲ್ಲ!
ಹತ್ತನೇಯ ತರಗತಿಗೆ ಹೋಗುವಾಗ ಊರಿನ ಕೆಲವು ಮಿತ್ರರ ಸಮಾಗಮದೊಂದಿಗೆ ನಮ್ಮ ಊರಿನಲ್ಲಿ ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ ತನ್ಮೂಲಕ ಭಜನಾ ಮಂದಿರ ನಿರ್ಮಿಸುವ ಉದ್ದೇಶದ ಸಲುವಾಗಿ ಒಂದು ಸಮಾಜ ಸೇವಾ ಸಂಸ್ಥೆ ಹುಟ್ಟು ಹಾಕಿದೆವು. ಕೆಲವು ಮಿತ್ರರ ಸಹಾಯ ಪಡೆದು ಸಂಘ ಸಂಸ್ಥೆಗಳ ನೋಂದಣ ಕಛೇರಿಯಲ್ಲಿ ನೊಂದಾಯಿಸಿಕೊಂಡೆವು.
ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸ್ವಯಂ ಸೇವಕಾನಾಗಿ, ಕಾರ್ಯದರ್ಶಿಯಾಗಿ ಕೆಲವು ವರ್ಷಗಳ ಕಾಲ ದುಡಿಯುವಾಗ, ಊರಿನ ಒಂದು ಸಂಪೂರ್ಣ ಅಭಿವೃದ್ದಿಯ ನೀಲಿ ನಕಾಶೆ ಮಾಡಿ, ಮಂಡಲ ಪಂಚಾಯತು ಹಾಗೂ ಸರಕಾರಕ್ಕೆ ಕಳುಹಿಸಿ, ತನ್ಮೂಲಕ ಹೋರಾಟಕ್ಕೆ ಸದಸ್ಯರ ಮೂಲಕ ಇಳಿದು, ಸುಮಾರು ಐದು ವರ್ಷಗಳಲ್ಲಿ ಶ್ರೀಗುರುರಾಘವೇಂದ್ರ ಸ್ವಾಮಿಗಳವರ ವೃಂದಾವನ, ಬಂಟಕಲ್ಲಿನಿಂದ ಹೇರೂರು ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಡಾಮಾರೀಕರಣ, ಕುಡಿಯುನ ನೀರಿನ ವ್ಯವಸ್ಥೆ, ಬಸ್ಸು ತಂಗುದಾಣ ಹಾಗೂ ಸ್ಮಶಾನಕ್ಕೆ ಒಂದಿಷ್ಟು ಜಾಗ ಇತ್ಯಾದಿಗಳನ್ನು ಸರಕಾರದಿಂದ ದೊರಕಿಸಿಕೊಂಡೆವು (ಈ ಐದು ವರ್ಷಗಳ ಹೋರಾಟದ ಬಗ್ಗೆ ಬರೆದರೆ ಒಂದು ದೊಡ್ಡ ಕುತೂಹಲದ ಕಾದಂಬರಿಯಾದೀತು. ಒಂದು ದಿನದ ಮಟ್ಟಿಗೆ ನಾನು ಜೈಲು ಕೂಡ ಸೇರಿದ್ದೆ!)
ಈಗಿನ ಯುವಕರು ಹಾಗೂ ಊರವರು, ಬೆಳ್ಳಿ ಮಹೋತ್ಸವದ ಸಲುವಾಗಿ, ಭಜನಾ ಮಂಡಳಿಯ ಕಟ್ಟಡ, ಹಾಲ್ ಹಾಗೂ ವೃಂದಾವನದ ಪುನರ್ನಿರ್ಮಾಣ ಮಾಡಿ, ಊರಿನ ಜನರಿಗೆ ಮದುವೆ, ಮುಂಜಿ, ಮತ್ತು ಇತರರ ಸಾಮಾಜಿಕ ಕಾರ್ಯಕ್ರಮ ಮಾಡಲು ಅನುವು ಮಾಡಿ ಕೊಟ್ಟಿದ್ದು ನೋಡುವಾಗ ತುಂಬಾ ಸಂತೋಷ ವಾಗುತ್ತಿದೆ.
ಸ್ಮಶಾನದ ಜಾಗದಲ್ಲಿ ಶ್ರೀ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಸಹಾಯಸ್ತದಲ್ಲಿ ಹಾಗೂ ಊರಿನ ಜನರ ತನು ಮಾನ ಧನ ಸಹಾಯದಿಂದ ಒಂದು ಸುಸಜ್ಜಿತವಾದ ವ್ಯವಸ್ಥೆ ಮಾಡಿಸಿಕೊಂಡಿದ್ದಾರೆ
ಎಳೆಯ ವಯಸ್ಸಿನಲ್ಲಿ ಇಂತಹ ಕೆಲಸಕ್ಕೆ ಕೈ ಹಾಕುವಾಗ ಕೆಲವು ಜನ ನನ್ನನ್ನು ತಮಾಷೆಗೆ ಗುರಿಮಾಡಿದ್ದೂ ಇದೆ. ತೆಂಗಿನ ಗರಿಯ ರಾಯರ ಗುಡಿ ಕಟ್ಟಿ ಭಜನೆ ಮಾಡುವಾಗ ಕೆಲವು ನಾಸ್ತಿಕರು ಮಾಡಿದ ತಮ್ಮಷೆ ಇನ್ನೂ ನನ್ನ ಸ್ಮೃತಿ ಪಟಲದಿಂದ ಮಾಸಿಲ್ಲ. ಆದರೆ ಇಂದು ಈ ಸಂಸ್ಥೆ ದೊಡ್ಡ ಮರವಾಗಿ ಬೆಳೆದು ಊರಿಗೆ ನೆರಳು ಕೊಡುತ್ತಿರುವುದು ಅಷ್ಟೆ ಸತ್ಯ. ಈಗ ಊರಿಗೆ ಹೋದಾಗ ಊರವರಿಂದ ಸಿಗುವ ಮರ್ಯಾದೆ ನೋಡಿದರೆ ನನ್ನ ಹೃದಯ ತುಂಬಿ ಕಣ್ಣನ್ನು ತೆವಗೊಳಿಸುತ್ತದೆ. ‘’ ಪರೋಪಕಾರಾರ್ಥಮಿದಂ ಶರೀರಂ’’ ಎಂಬ ಮಾತನ್ನು ಅಕ್ಷರಶಃ ಪಾಲಿಸಿದ್ದರಿಂದ, ಅದರಿಂದ ಸಿಗುವ ಸಂಪೂರ್ಣ ಸಿಹಿ,ಕಹಿ, ಸಂತೋಷದ ಅನುಭವ ನನಗಾಗಿದೆ.
 
ಸ್ಪೂರ್ತಿ,
ಬಂಟಕಲ್ಲು

1 comment:

  1. ಶುಭಮ್ ಭ್ರೂಯಾತ್... :)
    http://badari-poems.blogspot.in/2013/06/blog-post_24.html

    ReplyDelete